|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಗೋಕರ್ಣ ದೇವಾಲಯ – ಶ್ರೀರಾಮಚಂದ್ರಾಪುರಮಠಕ್ಕೆ ಮತ್ತೊಂದು ಮಹತ್ವದ ಜಯ

ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯ ಹಾಗೂ ಪರಿವಾರ ದೇವಾಲಯಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯದಲ್ಲಿ ಶ್ರೀರಾಮಚಂದ್ರಾಪುರಮಠಕ್ಕೆ ಮತ್ತೊಂದು ಮಹತ್ವದ ಜಯ ಲಭಿಸಿದೆ. ಮಹಾಬಲೇಶ್ವರ ದೇವಾಲಯದ ಪಾರ್ಶ್ವದಲ್ಲಿರುವ ಆದಿಗೋಕರ್ಣದ ಪುನರ್ನಿರ್ಮಾಣಕ್ಕೆ ತಡೆ ನೀಡಬೇಕು ಎಂದು ಮಾಡಲಾಗಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ ; ನ್ಯಾಯಾಲಯದ ವೆಚ್ಚವನ್ನು ಶ್ರೀಮಠಕ್ಕೆ ಸಂದಾಯಮಾಡುವಂತೆ ಅರ್ಜಿದಾರರಿಗೆ ಸೂಚಿಸಿ ಆದೇಶ ಹೊರಡಿಸಿದೆ.

 

ಆದಿಗೋಕರ್ಣ ದೇವಾಲಯ ಶಿಥಿಲವಾಗಿದ್ದ ಕಾರಣ, ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಂತೆ ಪುನರ್ನಿರ್ಮಾಣದ ಕಾರ್ಯವನ್ನು 2014 ರಲ್ಲಿ ಆರಂಭಿಸಲಾಗಿತ್ತು. ಅಭಿವೃದ್ಧಿಯನ್ನು ಸಹಿಸದ ಕೆಲವು ಪಟ್ಟಭದ್ರ ಸ್ವಹಿತಾಸಕ್ತಿಗಳ ಕುಮ್ಮಕ್ಕಿನಿಂದ ಶ್ರೀಮಠದ ವ್ಯವಸ್ಥೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ; ಆದಿಗೋಕರ್ಣದ ಸಂರಕ್ಷಣೆಗಾಗಿ ನಡೆಯುತ್ತಿದ್ದ ಪುನರ್ನಿರ್ಮಾಣ ಕಾರ್ಯಕ್ಕೆ ತಡೆ ನೀಡುವಂತೆ ಅರ್ಜೀದಾರರು ನ್ಯಾಯಾಲಯವನ್ನು ಆಗ್ರಹಿಸಿದ್ದರು.

 

ಪುರಾತತ್ವ ಇಲಾಖೆ ಹಾಗೂ ಇತರ ಅಗತ್ಯ ಅನುಮತಿಯನ್ನು ಪಡೆದುಕೊಂಡೇ ಪುನರ್ನಿರ್ಮಾಣ ಕಾರ್ಯವನ್ನು ಶ್ರೀಮಠದ ಆಡಳಿತ ವ್ಯವಸ್ಥೆ ಕೈಗೆತ್ತಿಕೊಂಡಿತ್ತಾದರೂ, ನ್ಯಾಯಾಲಯದ ಮೆಟ್ಟಿಲೇರಿ ಅಭಿವೃದ್ಧಿಗೆ ತಡೆ ತರುವ ಪ್ರಯತ್ನಗಳನ್ನು ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕುಮಟಾದ ಸಿವಿಲ್ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಲಯ ತಡೆ ನೀಡುವಂತೆ ಮಾಡಲಾಗಿದ್ದ ಮೂಲ ದಾವೆಯನ್ನು ತಿರಸ್ಕರಿಸುವ ಜೊತೆಗೆ ಶ್ರೀಮಠಕ್ಕೆ ನ್ಯಾಯಾಲಯದ ವೆಚ್ಚವನ್ನೂ ನೀಡುವಂತೆ ಅರ್ಜಿದಾರರಿಗೆ ಆದೇಶ ಮಾಡಿದೆ.

 

ಕಾಳಜಿಯಲ್ಲ… ಶ್ರೀಮಠದ ವಿರುದ್ಧ ದುರುದ್ದೇಶ:

 

ಆದಿಗೋಕರ್ಣದ ಪುನರ್ನಿರ್ಮಾಣಕ್ಕೆ ತಡೆಕೋರಿದವರಿಗೆ ಸಂರಕ್ಷಣೆಯ ಯಾವ ಉದ್ದೇಶವೂ ಇಲ್ಲ, ಶ್ರೀಮಠದ ಆಡಳಿತಕ್ಕೆ ತೊಂದರೆ ಕೊಡುವುದಷ್ಟೇ ಅರ್ಜಿದಾರರ ಉದ್ದೇಶವಾಗಿತ್ತು. ಶ್ರೀಮಠದ ಆಡಳಿತದ ವಿರುದ್ಧ ಇರುವ ದುರುದ್ದೇಶವೇ ಈ ಅರ್ಜಿಗೆ ಮೂಲ ಕಾರಣ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದಿನಾಂಕ 05.12.2018 ರಂದು ಅರ್ಜಿದಾರರು ತಮ್ಮ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಸಲ್ಲಿಸಿದ್ದ ಮನವಿಯಲ್ಲಿ ಈ ದುರುದ್ದೇಶ ಸಾಬೀತಾಗಿದೆ.

 

ಪಟ್ಟಭದ್ರ ಸ್ವಹಿತಾಸಕ್ತಿಗಳಿಂದ ಅಭಿವೃದ್ಧಿಗೆ ತಡೆ:

 

ಶ್ರೀಮಹಾಬಲೇಶ್ವರ ದೇವಾಲಯವು 2008 ರಲ್ಲಿ ಶ್ರೀಮಠಕ್ಕೆ ಪುನರ್ಹಸ್ತಾಂತರವಾದ ನಂತರ ಪ್ರತಿ ಹಂತದಲ್ಲು ಕೆಲವು ಸ್ವಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿದ್ದು, ಗೋಕರ್ಣದ ಸಮಗ್ರ ಅಭಿವೃದ್ಧಿಗೆ ತಡೆಯುಂಟುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 2008 ಕ್ಕೂ ಮೊದಲು ಯಾತ್ರಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ. ಶ್ರೀಮಠ ಉಚಿತ ಪ್ರಸಾದ ಭೋಜನದ ವ್ಯವಸ್ಥೆಯನ್ನು ಮಾಡಲು ಆರಂಭಿಸಿದಾಗ, ಅದಕ್ಕೂ ನ್ಯಾಯಾಲಯದಿಂದ ತಡೆ ತರುವ ಪ್ರಯತ್ನ ನಡೆದಿತ್ತು. ಆದರೆ ನ್ಯಾಯಾಲಯ ಆ ಅರ್ಜಿಯನ್ನೂ ತಿರಸ್ಕರಿಸಿ; ಎರಡು ಹೊತ್ತು ಉಚಿತ ಪ್ರಸಾದ ಭೋಜನಕ್ಕೆ ಅವಕಾಶಮಾಡಿಕೊಟ್ಟಿತ್ತು. ಇಂದು ಶ್ರೀಮಠದ ಆಡಳಿತದಿಂದ ಆರಂಭವಾದ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆ ನಾಡಿನ ಪ್ರಶಂಸೆಗೆ ಪಾತ್ರವಾಗಿದೆ.

 

ಆದಿಗೋಕರ್ಣ ದೇವಾಲಯದ ಪುನರ್ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಶ್ರೀಮಠಕ್ಕೆ ಮಹತ್ವದ ಜಯ ಲಭಿಸಿರುವುದು; ಶ್ರೀಕ್ಷೇತ್ರ ಗೋಕರ್ಣವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರೀಮಠಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಿದಂತಾಗಿದೆ.