|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಷಡ್ಯಂತ್ರದ ಒಕ್ಕೂಟ

ಸಾವಿರಾರು ವರ್ಷಗಳಿಂದ ದಕ್ಷಿಣದ ಸರ್ವಶ್ರೇಷ್ಠ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಶಬರಿಮಲೆಯಲ್ಲಿ ಏನಾಗುತ್ತಿದೆ? ಇದಕ್ಕೆ ಉತ್ತರ ಪ್ರಾಯಶಃ ಎಲ್ಲರಿಗೂ ಗೊತ್ತಿರುವುದೇ ಆಗಿದೆ.
ಹಾಗೆ ನೋಡಿದರೆ..ಶಬರಿಮಲೆ ಮಾತ್ರವಲ್ಲ, ಅದು ಅಮರನಾಥ ಯಾತ್ರೆಯಿರಬಹುದು, ಕುಂಭಮೇಳವಿರಬಹುದು, ಕಾವೇರಿಯ ತೀರ್ಥೋದ್ಭವವಿರಬಹುದು, ವರುಷಕ್ಕೊಮ್ಮೆ ನಡೆವ ನಮ್ಮ ನಾಡಿನ ಹೆಮ್ಮೆಯ ದಸರಾ ಮಹೋತ್ಸವವಿರಬಹುದು..ಹೀಗೇ ಸನಾತನದ ಧರ್ಮದ ಆಸ್ಥೆ, ಶ್ರದ್ಧೆಗಳು ಎಲ್ಲೆಲ್ಲಿ ಕೇಂದ್ರೀಕೃತವಾಗುತ್ತವೆಯೋ, ಅಲ್ಲೆಲ್ಲಾ ಒಂದಲ್ಲ ಒಂದು ರೀತಿಯ ಒಡಕು, ಅಶ್ರದ್ಧೆ, ಅನುಮಾನಗಳನ್ನು ಸೃಷ್ಟಿ ಮಾಡುವ ವ್ಯವಸ್ಥಿತವಾದ ಸಂಚು ಈ ಭರತ ಭೂಮಿಯಲ್ಲಿ ಬಹಳ ಕಾಲಗಳಿಂದ ನಡೆಯುತ್ತಲೇ ಇದೆ.
ಅತಿ ಬುದ್ಧಿವಂತರಾದ ನಮ್ಮ ಮನದಲ್ಲಿ ಅನುಮಾನದ ಬೀಜವನ್ನೊಮ್ಮೆ ಬಿತ್ತಿದರೆ ಸಾಕು, ಅದು ಕ್ಷಣಾರ್ಧದಲ್ಲಿ ಹೆಮ್ಮರವಾಗಿ ಬೆಳೆದು ಕೊಂಬೆ ರೆಂಬೆಗಳನ್ನು ಸೃಷ್ಟಿಸುತ್ತದೆ. ಮಾತ್ರವಲ್ಲ, ಆ ಬೀಜಕ್ಕೆ ನೀರೆರೆದು ಪೋಷಿಸುವಲ್ಲಿ, ಹಾಗೂ ಅದರಿಂದಲೇ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಕೆಲವೊಂದು ಸುದ್ದಿಮಾಧ್ಯಮಗಳೂ, ಬುದ್ಧಿಜೀವಿಗಳೂ, ಸೆಲೆಬ್ರಿಟಿಗಳೆಂದು ಕರೆಸಿಕೊಳ್ಳುವ ಕೆಲ ಜನರೂ ಬೇಕಾದಷ್ಟು ಪರಿಣತಿಯನ್ನು ಹೊಂದಿದ್ದಾರೆ.

 

ನಾನೀಗ ಹೇಳ ಹೊರಟಿರುವುದು ಮೊನ್ನೆ ನಡೆದ ವಿಶ್ವ ಹವ್ಯಕ ಸಮ್ಮೇಳನದ ಬಗ್ಗೆ. ಎಪ್ಪತ್ತೈದು ವರ್ಷಗಳಿಂದ ಹವ್ಯಕ ಸಮಾಜಕ್ಕಿರುವ ಏಕ ಮಾತ್ರ ನೋಂದಾಯಿತ ಸಂಘಟನೆಯಾಗಿ ಪ್ರಕಾಶಿಸುತ್ತಿರುವ ಹವ್ಯಕ ಮಹಾಸಭೆಯನ್ನೂ, ಅದರ ಹಿಂದಿರುವ ಸಮಾಜ ಶಕ್ತಿಯನ್ನೂ ಹಾಳುಗೆಡಹುವ ಪ್ರಯತ್ನವೊಂದು ಕೆಲ ಸಮಯಗಳಿಂದೀಚೆಗೆ ನಡೆಯುತ್ತಲೇ ಇದೆ.

 

೭೫ ವರ್ಷಗಳ ಹಿಂದೆ, ಅಂದು ಶ್ರಿರಾಮಚಂದ್ರಾಪುರ ಮಠದ ಪಿಠಾಧಿಪತಿಗಳಾಗಿದ್ದ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾ ಸ್ವಾಮಿಗಳ ದಿವ್ಯ ಕಲ್ಪನೆಯಂತೆ ಹುಟ್ಟಿಕೊಂಡ ಸಂಸ್ಥೆ ಹವ್ಯಕ ಮಹಾಸಭಾ. ಇಂದಿಗೂ ೮೦% ಕ್ಕಿಂತಲೂ ಹೆಚ್ಚು ಮಂದಿ ಹವ್ಯಕರು ನಡೆದುಕೊಳ್ಳುತ್ತಿರುವುದು ಶ್ರೀ ರಾಮಚಂದ್ರಾಪುರ ಮಠಕ್ಕೇ ಆಗಿದೆ. ಸಹಜವಾಗಿಯೇ ಹವ್ಯಕ ಮಹಾಸಭೆಯೆಂಬ ಮಹಾನ್ ಸಂಸ್ಥೆಯ ಹಿಂದಿರುವ ಶಕ್ತಿಯೂ, ಜನರ ಶ್ರದ್ಧಾಕೇಂದ್ರವೂ ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳೇ ಆಗಿದ್ದಾರೆ.

 

ಅಂದಾಜು ೫ ರಿಂದ ೬ ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಹವ್ಯಕ ಸಮಾಜವು ಸಮಾಜಕ್ಕೆ ಅದೆಷ್ಟೋ ಚಿಂತಕರನ್ನೂ, ಮೇಧಾವಿಗಳನ್ನೂ, ವಿದ್ವಾಂಸರನ್ನೂ, ವೈದ್ಯರನ್ನೂ, ವಿಜ್ಞಾನಿಗಳನ್ನೂ, ಕೃಷಿಕರನ್ನೂ ನೀಡಿದೆ. ಈ ಎಲ್ಲದರ ಜೊತೆ ಜೊತೆಗೆ ಸನಾತನ ಧರ್ಮದ ಸಂಸ್ಕೃತಿಯನ್ನೂ ಉಳಿಸಿ ಬೆಳೆಸಿಕೊಳ್ಳುತ್ತಲೇ ಬಂದಿದೆ. ಇಂತಹಾ ಹವ್ಯಕ ಸಮಾಜವನ್ನು ಸಮಾಜದಲ್ಲೊಂದು ಶಕ್ತಿಯಾಗಿ ಬೆಳೆಸುವ ಪ್ರಯತ್ನವನ್ನು ಜಗದ್ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಮಾಡುತ್ತಲೇ ಬಂದಿದ್ದಾರೆ. ಗೋಸಂರಕ್ಷಣೆಯಿಂದ ಹಿಡಿದು, ಸನಾತನ ಧರ್ಮದ ಒಳಿತುಗಳನ್ನು ಉಳಿಸಿ, ಬೆಳೆಸಿ, ಸಮಾಜಕ್ಕೆ ಅದನ್ನು ಬಿತ್ತರಿಸುವ ಕಾಯಕದಲ್ಲಿ ಬುದ್ಧಿವಂತ ಹವ್ಯಕ ಸಮಾಜವು ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಅವರಿಂದು ಸಫಲರೂ ಆಗಿದ್ದಾರೆ.

 

ಸನಾತನ ಧರ್ಮದ ಒಂದು ಶಕ್ತಿಯಾಗಿ ಹವ್ಯಕ ಸಮಾಜವು ಬೆಳೆದು ನಿಂತಂತೆಯೇ ಅದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ. ಹಲವರ ಅಸೂಯೆಗೆ, ಹಲವರ ಅತೃಪ್ತಿಗೆ, ಹಲವಾರು ಆಮಿಷಗಳಿಗೆ ಅದು ಹೇತುವೂ ಆಗಿದೆ.
ಅದರ ಫಲವಾಗಿಯೇ, ೨೦೧೪ನೇ ಇಸವಿಯಲ್ಲಿ ಹವ್ಯಕ ಸಮುದಾಯದ ಶ್ರದ್ಧೆಯ ಮೇಲೆ ಹೊಡೆತ ನೀಡುವ ಮೊದಲ ಪ್ರಯತ್ನವು ನಡೆಯಿತು. ಅದು ರಾಮಚಂದ್ರಾಪುರ ಮಠದ ಪೀಠಾಧಿಪತಿಗಳ ಮೇಲೆ ಅತ್ಯಾಚಾರದ ಮಿಥ್ಯಾರೋಪವಾಗಿ ಸುದ್ದಿ ಮಾಡಿತು. ಆ ಆರೋಪದ ಮೊದಲ ಗುರಿಯೇ ಶ್ರದ್ಧೆಯ ಮೇಲೆ ಹೊಡೆತ. ಎರಡನೆಯದು ಸಮಾಜದ ಶಕ್ತಿಯಾಗಿ ಬೆಳೆಯುತ್ತಿರುವ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಪೀಠತ್ಯಾಗ. ಮೂರನೇಯದು ಹವ್ಯಕ ಸಮಾಜವನ್ನು ಒಡೆದು ಆಳುವುದು.

 

ಈ ಮಿಥ್ಯಾರೋಪದ ಪರಿಣಾಮವಾಗಿ ನಡೆದ ಮುಖ್ಯ ಘಟನೆಗಳು ಮೂರು..
೧. ವಿವಿಧ ಮಾಧ್ಯಮಗಳಲ್ಲಿ ರಾಘವೇಶ್ವರ ಸ್ವಾಮೀಜಿಯವರ ಮೇಲೆ ಎಲ್ಲಿಲ್ಲದ ಅಪಪ್ರಚಾರ.
೨. ಸನಾತನ ಧರ್ಮ ಸಂವರ್ಧಿನಿ ಸಭಾ ಎಂಬ ಶಂಕರ ಪರಂಪರೆಯ ಯತಿಗಳ ಒಕ್ಕೂಟದಿಂದ ಅತ್ಯಾಚಾರ ಆರೋಪ ಹೊತ್ತವರನ್ನು ಹೊರಗಿಡುವ ನಿರ್ಣಯ.
೩. ಶ್ರೀಗಳ ಪೀಠತ್ಯಾಗವೊಂದನ್ನೇ ಆಗ್ರಹಿಸುವ, ಹಾಗೂ ಅವರ ವಿರುದ್ಧ ಅಪಪ್ರಚಾರಗಳನ್ನಷ್ಟೇ ನಡೆಸುವ ಉದ್ದೇಶದಿಂದ ಹುಟ್ಟಿಕೊಂಡ ಹವ್ಯಕ ಒಕ್ಕೂಟ ಎಂಬ ಬೆರಳೆಣಿಕೆಯ ಸದಸ್ಯರಿರುವ ಒಕ್ಕೂಟದ ನಿರ್ಮಾಣ.

 

ಹಾಗಾದರೆ, ವಿಶ್ವ ಹವ್ಯಕ ಸಮ್ಮೇಳನದ ಸಂದರ್ಭ ಏನಾಯಿತು? ಎಂದು ಕೇಳಿದರೆ, ಅಲ್ಲಿ ನಡೆದದ್ದೂ ಇದೇ ಪ್ರಯತ್ನ~ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮೇಲಿರುವ ಮಿಥ್ಯೋರೋಪಗಳನ್ನು ಮತ್ತೆ ಮುಂಚೂಣಿಗೆ ತರುವುದು. ಹಾಗೂ ಅದೇ ಆರೋಪಗಳನ್ನು ಮುಂದಿಟ್ಟು ಹವ್ಯಕ ಸಮಾಜವನ್ನು ಇಬ್ಭಾಗವಾಗಿಸುವುದು!

 

ಅದಕ್ಕಾಗಿ ದಾಳವಾಗಿ ಬಳಸಿರುವುದು ೧೫% ಕ್ಕಿಂತ ಕಡಿಮೆ ಹವ್ಯಕರು ನಡೆದುಕೊಳ್ಳುವ ಸ್ವರ್ಣವಲ್ಲೀ ಗುರುಪೀಠವನ್ನು.
ಸಮಾರಂಭಕ್ಕೆ ತಾವು ಬರುವುದಾಗಿ ಸಂತೋಷದಿಂದಲೇ ಒಪ್ಪಿಕೊಂಡಿದ್ದ ಸ್ವರ್ಣವಲ್ಲಿ ಶ್ರೀಗಳು, ಕೊನೆಯ ಘಳಿಗೆಯಲ್ಲಿ “ಆರೋಪಗಳನ್ನು ಹೊತ್ತ ಯತಿಗಳು ಇರುವಲ್ಲಿ ನಾವು ಬರಲಾರೆವು” ಎಂಬ ಪತ್ರಿಕಾ ಹೇಳಿಕೆಯನ್ನು ನೀಡಬೇಕಾದರೆ, ಒತ್ತಾಯಪೂರ್ವಕವಾಗಿ ಅವರಲ್ಲಿ ಅಂತಹಾ ಹೇಳಿಕೆಯನ್ನು ನೀಡಿಸಬೇಕಾದರೆ, ಇದರ ಹಿಂದೆ ಅದೆಷ್ಟು ಪ್ರಬಲ ಶಕ್ತಿಗಳು ಕೆಲಸ ಮಾಡುತ್ತಿರಬೇಕು?!
ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ತೇಜೋವಧೆ ಗೈಯಲೆಂದೇ ಹುಟ್ಟಿಕೊಂಡ ಬೆರಳೆಣಿಕೆಯ ಸಕ್ರಿಯ ಸದಸ್ಯರಿರುವ, ಅಖಿಲ ಹವ್ಯಕ ಒಕ್ಕೂಟದ ಪರವಾಗಿರುವ ಜಾಲತಾಣಿಗರ ಗುಂಪೊಂದು ‘ಸ್ವರ್ಣವಲ್ಲೀ ಶ್ರೀಗಳು ವಿಶ್ವ ಹವ್ಯಕ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು’ ಎಂದು ಒತ್ತಾಯಿಸಿರುವುದಕ್ಕೂ, ಸ್ವಾಮೀಜಿಯವರ ಈ ನಿರ್ಧಾರಕ್ಕೂ ಸಂಬಂಧವಿದೆಯೇ?
ಹೌದೆನ್ನುತ್ತದೆ ಈ ಕೆಳಗೆ ಲಗತ್ತಿಸಿರುವ ಕರ ಪತ್ರ. ಈ ಕರ ಪತ್ರದಲ್ಲಿ ಕಾಣಿಸುವ ಮುಖ್ಯ ಹೆಸರುಗಳು~
೧. ಆಕ್ಷೇಪಾರ್ಹ ಹೇಳಿಕೆಯಿತ್ತು ಕೊನೆಯ ಗಳಿಗೆಯಲ್ಲಿ ವಿಶ್ವ ಹವ್ಯಕ ಸಮ್ಮೇಳನಕ್ಕೆ ಗೈರಾದ ಸ್ವರ್ಣವಲ್ಲಿ ಶ್ರೀಗಳು
೨. ‘ಸನಾತನ ಧರ್ಮ ಸಂವರ್ಧಿನೀ ಸಭಾದ ನಿರ್ಣಯವನ್ನು ಖಂಡಿಸಿದ ಹವ್ಯಕ ಮಹಾಸಭೆಯು ಕ್ಷಮೆ ಯಾಚಿಸಬೇಕು, ಸಮ್ಮೇಳನದಲ್ಲಿ ರಾಘವೇಶ್ವರ ಶ್ರೀಗಳು ಭಾಗವಹಿಸಬಾರದು’ ಎಂದು ಹೇಳಿಕೆ ನೀಡಿದ ಎಡತೊರೆಯ ಸ್ವಾಮಿಗಳು
೩. ಸನಾತನ ಧರ್ಮಸಂವರ್ಧಿನೀ ಸಭಾದಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಹಾಗೂ ರಾಮಚಂದ್ರಾಪುರ ಮಠದ ವಿರುದ್ಧ ನಡೆವ ಷಡ್ಯಂತ್ರಗಳಲ್ಲಿ ಆಗಾಗ ಹೆಸರು ಕೇಳುತ್ತಿರುವ ಟಿ ಶ್ಯಾಂಭಟ್ ಅವರ ಜೊತೆ ನಿಕಟ ಸಂಬಂಧವನ್ನು ಇರಿಸಿಕೊಂಡಿರುವ ಎಡನೀರು ಶ್ರೀಗಳು
೪. ಸನಾತನ ಧರ್ಮಸಂವರ್ದಿನೀ ಸಭಾದ ಮುಖ್ಯ ರೂವಾರಿಗಳಾಗಿರುವ ಹಾಗೂ ಈ ಮೇಲಿನ ಮೂರೂ ಗುರುಪೀಠಗಳನ್ನು ಒಂದು ರೀತಿಯಲ್ಲಿ ಸದಾ ಪೋಷಿಸುತ್ತಾ ಬಂದಿರುವ ಶೃಂಗೇರಿ ಗುರು ಪೀಠದ ಆಡಳಿತಾಧಿಕಾರಿಗಳಾಗಿರುವ ಗೌರೀಶಂಕರರು
೫. ರಾಮಚಂದ್ರಾಪುರ ಮಠದ ವಿರುದ್ಧ ಷಡ್ಯಂತ್ರಗಳಲ್ಲಿ ಆಗಾಗ ಹೆಸರು ಕೇಳಿಸುತ್ತಿರುವ ಕೃಷ್ಣ ಶಾಸ್ತ್ರಿ ಹಾಗೂ ಟಿ ಶ್ಯಾಂಭಟ್ ಅವರು.

 

ಒಟ್ಟಿನಲ್ಲಿ ಮೇಲೆ ಹೇಳಲಾದ ಎಲ್ಲಾ ಆಗು ಹೋಗುಗಳನ್ನೂ, ಈ ಕೆಳಗೆ ಲಗತ್ತಿಸಿದ ಕರಪತ್ರದ ಜೊತೆ ತುಲನೆ ಮಾಡಿ ನೋಡಿದರೆ, ಸಕಲ ಷಡ್ಯಂತ್ರಗಳೂ, ಅಡ್ಡಗಾಲುಗಳೂ, ಅಪಪ್ರಚಾರಗಳೂ, ವೈಮನಸ್ಸುಗಳೂ ಎಲ್ಲಿಂದ ಸೃಷ್ಟಿಯಾಗಿ ಎತ್ತ ಮುಖ ಮಾಡುತ್ತವೆ ಎಂಬುದಂತೂ ಸ್ಪಷ್ಟವಾಗುತ್ತದೆ.

 

ಕೊನೆಯ ಮಾತು: ಅನಾದಿಕಾಲದಿಂದ ಶೋಭಿಸುತ್ತಿರುವ ಸನಾತನ ಧರ್ಮವು ನೆಲೆ ನಿಂತಿರುವುದು ವಜ್ರದಷ್ಟು ಕಠಿಣವಾದ ವಿಶ್ವಾಸದ ಆಧಾರಸ್ತಂಭಗಳ ಮೇಲೆ. ಅದು ಯಾವ ಕೊಡಲಿಯೇಟಿಗೂ ಕುಸಿದು ಬೀಳುವ ಸೌಧವಲ್ಲ. ಸಕಲ ಅಡ್ಡದಾರಿಯ ಪ್ರಯತ್ನಗಳಿಗೂ, ಕೊಡಲಿಯೇಟಿಗೂ ಮುಂಬರುವ ಕಾಲವೇ ಉತ್ತರಿಸಲಿದೆ ಎಂಬ ವಿಶ್ವಾಸದೊಂದಿಗೆ ಗುರು ತೋರಿದ ದಾರಿಯಲ್ಲಿ ಒಳಿತಿನತ್ತ ಒಂದಾಗಿ ಮುನ್ನಡೆಯುವುದರಲ್ಲಿಯೇ ಶ್ರೇಯಸ್ಸಿದೆ.

ಜೈ ಹಿಂದ್.