|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀ ಮಠದ ಸೇವೆ ಮನಸ್ಸಿಗೆ ಮುದ ನೀಡುವ ಕಾರ್ಯ: ಮನೋರಂಜಿನಿ ಆರ್ .ಭಟ್ , ಮುಂಬೈ

“ಶ್ರೀಮಠದ ಸೇವೆ ಮನಸ್ಸಿಗೆ ಅತ್ಯಂತ ಮುದ ನೀಡುತ್ತಿದೆ. ಮುಂಬೈ ಮಹಾನಗರದಲ್ಲಿ ಪ್ರತೀ ತಿಂಗಳು ನಡೆಯುವ ಹವ್ಯಕ ಸಭೆಗಳು ನಮ್ಮ ಸಂಘಟನೆಯನ್ನು ಬಲ ಪಡಿಸಲು ಅತ್ಯಂತ ಉಪಯುಕ್ತವಾಗಿದೆ. ಶ್ರೀಗುರುಗಳ ಎಲ್ಲಾ ಯೋಜನೆಗಳಲ್ಲೂ ನಾವೆಲ್ಲ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದೇವೆ” ಈ ಮಾತುಗಳು ಸಿದ್ಧಮೂಲೆ ಮೂಲದ ಉದ್ಯೋಗ ನಿಮಿತ್ತ ಪ್ರಸ್ತುತ ಮುಂಬೈ ನಿವಾಸಿಗಳಾಗಿರುವ ರಮಣ ಭಟ್ ಸಿದ್ಧಮೂಲೆ ಇವರ ಪತ್ನಿ ಮನೋರಂಜಿನಿಯವರದ್ದು.

ಮಂಗಳೂರು ಸಮೀಪದ ಪಣಂಬೂರು ರಾಮರಾವ್,ಮೀನಾಕ್ಷಿ ದಂಪತಿಗಳ ಪುತ್ರಿಯಾದ ಮನೋರಂಜಿನಿಯವರು ಮುಂಬೈ ನಗರದಲ್ಲೇ ಬೆಳೆದವರು. ಕೆನರಾ ಬ್ಯಾಂಕ್ ನಲ್ಲಿ ಉನ್ನತ ಉದ್ಯೋಗದಲ್ಲಿದ್ದ ಅವರು ಸ್ವಯಂ ನಿವೃತ್ತಿ ಪಡೆದುಕೊಂಡವರು.

ಸಮಾಜಸೇವೆಯಲ್ಲಿ ಆಸಕ್ತಿ ಹೊಂದಿರುವ ಇವರು ಮುಂಬೈ ಹವ್ಯಕ ವಲಯದ ಕೋಶಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ನಾದಿನಿ(ಪತಿಯ ತಂಗಿ) ಸುಮಾ ರಮೇಶ್ ಅವರ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆಗೈದ ಇವರು ಎರಡು ವರ್ಷಗಳ ಕಾಲ ಒಂದು ಹಸುವಿನ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಾವೇ ಭರಿಸಿ ಇತರರಿಗೆ ಮಾದರಿಯಾದವರು.

“ಚಾತುರ್ಮಾಸ್ಯದ ಸಂದರ್ಭದಲ್ಲಿ ಪ್ರತಿ ವರ್ಷವೂ ಶ್ರೀಗುರುಗಳ ದರ್ಶನ ಪಡೆಯಲು ಬರುತ್ತೇವೆ. ಜೊತೆಗೆ ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ಶ್ರೀ ಮಠದ ಎಲ್ಲಾ ಯೋಜನೆಗಳಿಗೂ ಸಮರ್ಪಣೆ ಮಾಡುವ ಸುಯೋಗ ಲಭಿಸಿದೆ. ಶ್ರೀಮಠದ ಮೇಲಿನ ಶ್ರದ್ಧೆ,ಭಕ್ತಿ ಮನದಲ್ಲಿ ದೃಢವಾಗಿದೆ. ನಾವೆಲ್ಲ ಇಷ್ಟು ದೂರದಲ್ಲಿದ್ದರೂ ಮನ ಶ್ರೀಮಠದ ಸೇವೆಗಾಗಿ ಮಿಡಿಯುತ್ತಲೇ ಇದೆ” ಎನ್ನುವ ಇವರಿಗೆ ಹಲವಾರು ಬಾರಿ ಶ್ರೀಗುರುಗಳ ಭಿಕ್ಷಾಸೇವೆ, ಪಾದಪೂಜೆಗಳನ್ನು ನಡೆಸುವ ಸೌಭಾಗ್ಯ ದೊರಕಿದೆ ಎಂಬ ಸಂತೃಪ್ತಿಯಿದೆ.

ಮುಂಬೈ ಮಹಾನಗರದ ಒತ್ತಡದ ಬದುಕಿನ ನಡುವೆಯೂ ಗೋಸೇವೆಯ ಪುಣ್ಯ ಕಾರ್ಯಕ್ಕೆ ಮನಮಾಡಿರುವ ಮನೋರಂಜಿನಿ ಅವರು ತಮ್ಮ ಬಳಗದಲ್ಲಿ ದೇಶೀ ಗೋವುಗಳ ಮಹತ್ವದ ಅರಿವು ಮೂಡಿಸಿದ್ದಾರೆ. ತಾವು ಮಾಸದ ಮಾತೆಯಾಗಿ ಸೇವೆ ಗೈಯುವುದರ ಜೊತೆಗೆ ಮುಂಬೈ ಮಹಾನಗರದಲ್ಲೂ ಐವರು ಮಾತೆಯರನ್ನು ಮಾಸದ ಮಾತೆಯಾಗಿ ನಿಯೋಜಿಸಿದ ಹಿರಿಮೆ ಇವರದ್ದು.

ಊರಿಗೆ ಬಂದಾಗ ಹೊಸನಗರ ಶ್ರೀರಾಮಚಂದ್ರಾಪುರ ಮಠ, ಗೋಕರ್ಣ, ಗೋಸ್ವರ್ಗ ಮೊದಲಾದೆಡೆಗಳಿಗೆ ತೆರಳಿರುವ ಇವರು ಶ್ರೀ ಗುರುಗಳ ಪ್ರತಿಯೊಂದು ಯೋಜನೆಗಳ ಹಿಂದೆ ಇರುವ ಮಹೋನ್ನತ ಉದ್ದೇಶವನ್ನು ಹೆಮ್ಮೆಯಿಂದ ಹೇಳುತ್ತಾರೆ.

“ವಿಷ್ಣು ಗುಪ್ತ ವಿಶ್ವ ವಿದ್ಯಾಪೀಠದ ಪರಿಕಲ್ಪನೆ ಅದ್ಭುತ . ಸಮಾಜದಲ್ಲಿ ಮಾನವ ಸತ್ಪ್ರಜೆಯಾಗಿ ಬಾಳಲು ಬೇಕಾಗಿರುವ ಸದ್ಗುಣಗಳ ವಿಚಾರಧಾರೆ ಅಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ” ಎನ್ನುವ ಇವರಿಗೆ ಸದಾ ಶ್ರೀಮಠದ ಸೇವೆಯಲ್ಲಿ ಪಾಲ್ಗೊಳ್ಳ ಬೇಕೆಂಬುದೇ ಆಶಯ.
ದೂರದ ಮುಂಬೈ ನಿವಾಸಿಗಳಾಗಿದ್ದರೂ ಶ್ರೀಮಠದ ಸೇವೆಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವ, ಗೋವಿನ ಮಹತ್ವವನ್ನು ಜನಮಾನಸಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿರುವ ಮನೋರಂಜಿನಿ ಅವರ ಕಾರ್ಯ ಇತರರಿಗೆ ಮಾದರಿ.