|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಮಾತು~ಮುತ್ತು : ಸತ್ಸಂಗವೇಕೆ?

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಸತ್ಸಂಗವೇಕೆ?

ತ್ರಿಲೋಕಸಂಚಾರಿಯಾದ ನಾರದರು ಒಮ್ಮೆ ನಾರಾಯಣನನ್ನು ಕೇಳುತ್ತಾರೆ, “ಸತ್ಸಂಗದಿಂದ ದೊರೆಯುವ ಪ್ರಯೋಜನವೇನು?” ಎಂದು. ಆಗ, ಶ್ರೀಹರಿ “ಭೂಲೋಕಕ್ಕೆ ಹೋಗಿ ಈಗ ತಾನೇ ಹುಟ್ಟಿದ ಒಂದು ಹುಳುವನ್ನು ಕೇಳು” ಎನ್ನುತ್ತಾನೆ.
ನಾರದರು ಹಾಗೇ ಮಾಡಲು, ಆ ಹುಳು ತಕ್ಷಣ ಮರಣ ಹೊಂದುತ್ತದೆ. ಹಿಂತಿರುಗಿ ಬಂದ ನಾರದರು “ಹೀಗೇಕೆ?” ಎಂದು ಶ್ರೀಹರಿಯನ್ನು ಕೇಳುತ್ತಾರೆ.
ಆಗ ಶ್ರೀಹರಿ “ಈಗ ತಾನೇ ಹುಟ್ಟಿದ ಒಂದು ಪುಟ್ಟ ಹಕ್ಕಿಯನ್ನು ನೋಡು” ಎನ್ನುತ್ತಾನೆ. ನಾರದರು ಹಾಗೇ ಮಾಡಲು, ಆ ಹಕ್ಕಿಯೂ ಸತ್ತು ಹೋಗುತ್ತದೆ. ಮೂರನೆಯ ಬಾರಿ ನಾರದರು, ಆಗ ತಾನೇ ಜನಿಸಿದ ಒಂದು ಹಸುವಿನ ಕರುವನ್ನು ನೋಡುತ್ತಾರೆ. ಅದೂ ಸತ್ತು ಹೋಗುತ್ತದೆ.

ಬಹಳ ಚಿಂತಿತರಾದ ನಾರದರಿಗೆ ಆಗ ತಾನೇ ಜನಿಸಿದ ಒಬ್ಬ ರಾಜಕುಮಾರನನ್ನು ನೋಡಲು ಶ್ರೀಹರಿ ಹೇಳುತ್ತಾನೆ.
ನಾರದರು ಬಹಳ ಗಾಬರಿ ಬೀಳುತ್ತಾರೆ, “ಆ ರಾಜಕುಮಾರನೂ ಸತ್ತು ಹೋದರೆ ನನ್ನ ಗತಿಯೇನು? ರಾಜ ಸುಮ್ಮನೇ ಬಿಟ್ಟಾನೆಯೇ?!” ಎಂದು.
“ಹಾಗೇನೂ ಸಂಭವಿಸುವುದಿಲ್ಲ” ಎಂಬ ಶ್ರೀಹರಿಯ ಅಭಯದೊಂದಿಗೆ ನಾರದರು ರಾಜಕುಮಾರನನ್ನು ನೋಡಿದಾಗ, ಆ ರಾಜಕುಮಾರ “ಏಕೆ ಚಿಂತಿತರಾಗಿದ್ದೀರಿ? ನಾನು ಹಿಂದಿನ ಜನ್ಮಗಳಲ್ಲಿ ಹುಳ, ಪಕ್ಷಿ, ಹಸುವಿನ ಕರು ಇತ್ಯಾದಿಗಳಾಗಿದ್ದೆ. ನಿಮ್ಮ ದರ್ಶನದಿಂದ ಮುಕ್ತಿ ಪಡೆದು ರಾಜಕುಮಾರನ ಜನ್ಮ ಪಡೆದಿದ್ದೇನೆ” ಎನ್ನುತ್ತಾನೆ.
ಆಗ ನಾರದರಿಗೆ ಸತ್ಸಂಗದಿಂದ ಹೀನಜನ್ಮ ಕಳೆದು ಉತ್ತಮ ಜನ್ಮದ ಭಾಗ್ಯ ದೊರೆಯುತ್ತದೆ ಎಂಬ ಸತ್ಯದ ಅರಿವಾಗುತ್ತದೆ.