|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಮಾತು~ಮುತ್ತು : ಬೇಕು ಸಾಕಾದಾಗ ಬದುಕು ಹಸನು – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಂದು ದಿನ ಒಬ್ಬ ವ್ಯಕ್ತಿ ಒಂದು ಬಟ್ಟೆ ಅಂಗಡಿಗೆ ಬರುತ್ತಾನೆ. ಅದು ದೀಪಾವಳಿಯ ಸಮಯ. ಅವನಿಗೆ ಒಂದು ಸೀರೆ ತೆಗೆದುಕೊಳ್ಳಬೇಕಿತ್ತು. ಅಂಗಡಿಯಲ್ಲಿರುವ ಎಲ್ಲ ಸೀರೆಗಳನ್ನು ನೋಡಿ ಕೊನೆಗೆ ಒಂದು ಸೀರೆ ಆಯ್ಕೆ ಮಾಡಿಕೊಳ್ಳುತ್ತಾನೆ. ಅದಕ್ಕೆ ಬೆಲೆ ಎಷ್ಟು ಎಂದು ಕೇಳಿದಾಗ, ಅಂಗಡಿಯವನು-
“ಎರಡು ಸಾವಿರ ರೂಪಾಯಿ” ಎಂದು ಹೇಳುತ್ತಾನೆ.

 

ಆಗ ಇವನು-
“ಒಂದು ಸಾವಿರಕ್ಕೆ ಕೊಡುತ್ತೀರಾ?” ಎಂದು ಕೇಳುತ್ತಾನೆ.

 

ಅಂಗಡಿಯವನು ಇವನು ಈ ದಿನದ ಮೊದಲ ಗಿರಾಕಿ ಎಂದು ಆಲೋಚಿಸಿ ಆಯ್ತು ಎನ್ನುತ್ತಾನೆ.

ಆಗ ಅವನು-
“೫೦೦ಕ್ಕೆ ಕೊಡುತ್ತೀರಾ?” ಎನ್ನುತ್ತಾನೆ.

 

ಅಂಗಡಿಯವನು ಸಮಾಧಾನದಿಂದಲೇ ಆಯ್ತು ಎನ್ನುತ್ತಾನೆ.
ಆಗ ಇವನು-
“೨೫೦ ಕ್ಕೆ ಕೊಡುತ್ತೀರಾ?”ಎನ್ನುತ್ತಾನೆ.

 

ಅಂಗಡಿಯವನು ತಲೆ ಚಿಟ್ಟು ಹಿಡಿದು ಇವನು ಒಮ್ಮೆ ಇಲ್ಲಿಂದ ಹೋದರೆ ಸಾಕು ಎಂದು ಏನೂ ಕೊಡುವುದು ಬೇಡ; ಹಾಗೇ ಅದನ್ನು ಕೊಂಡು ಹೋಗು ಎಂದು ಹೇಳಿ, ಕೊಟ್ಟು, ಅವನನ್ನು ಕಳಿಸುತ್ತಾನೆ.

 

ಹೌದು, ಜೀವನದಲ್ಲಿ ನಮಗೆ ಎಷ್ಟು ಇದ್ದರೂ ಸಾಕು ಎನಿಸುವುದಿಲ್ಲ. ಇನ್ನಷ್ಟು ಮತ್ತಷ್ಟು ಬೇಕು ಅನಿಸುತ್ತದೆ.

 

ಒಮ್ಮೆ ಭರ್ತೃಹರಿಯ ಹತ್ತಿರ ಒಬ್ಬ ರಾಜ-
“ನಿನ್ನ ಹತ್ತಿರ ಏನುಂಟು! ನಿನೋಬ್ಬ ಬಿಕಾರಿ!” ಎನ್ನುತ್ತಾನೆ.

 

ಆಗ ಭರ್ತೃಹರಿ-
“ನಾನು ಕಾವಿ ಬಟ್ಟೆ ಧರಿಸಿದ್ದರೆ ನೀನು ಪೀತಾಂಬರ ಧರಿಸಿದ್ದೀಯ; ನಿನ್ನ ಹತ್ತಿರ ಅಪಾರ ಸಂಪತ್ತಿರಬಹುದು; ಆದರೆ ನನ್ನ ಹತ್ತಿರ ನೆಮ್ಮದಿ ಇದೆ; ನಿನಗೆ ಇನ್ನಷ್ಟು ಬೇಕು ಎಂದಿದೆ; ನನಗೆ ಇನ್ನು ಬೇಡ ಎನಿಸಿದೆ; ಹಾಗಾಗಿ ನಾನು ಶ್ರೀಮಂತ ನೀನೇ ಬಿಕಾರಿ” ಎನ್ನುತ್ತಾನೆ.

 

ಸಾಕು ಎಂದವ ಸಂನ್ಯಾಸಿ, ಬೇಕು ಎಂದವ ಸಂಸಾರಿ ಎನ್ನುತ್ತಾನೆ. ಈ ಬೇಕು ಸಾಕಾದಾಗ ನೆಮ್ಮದಿಯ ಜೀವನ ನಮ್ಮದಾಗುತ್ತದೆ.